Bele Parihara: ರೈತರಿಗೆ ರಾಜ್ಯ ಸರ್ಕಾರ ಸಂತಸ ಸುದ್ದಿಯನ್ನು ನೀಡಿದ್ದು, ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ಬರದಿಂದಾಗಿ ಬೆಳೆ ಹಾನಿಯಾದ 39 ಲಕ್ಷ ರೈತರಿಗೆ ಸುಮಾರು 3535.30 ಕೋಟಿ ರು.ಗಳ ಪರಿಹಾರವನ್ನು ರೈತರ ಖಾತೆಗಳಿಗೆ ನೇರವಾಗಿ ಪಾವತಿಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ವಿಧಾನ ಪರಿಷತ್ ನಲ್ಲಿ ಬೆಳೆ ಪರಿಹಾರದ ಕುರಿತು ಮಾತನಾಡಿದ ಸಚಿವ ಕೃಷ್ಣ ಬೈರೇಗೌಡರು ಹಿಂದಿನ ವರ್ಷಗಳಿಗೆ ಹೋಲಿಸಿದರೆ 2023-24ನೇ ಸಾಲಿನಲ್ಲಿ ಅತಿ ಹೆಚ್ಚು ಪರಿಹಾರ ನೀಡಲಾಗಿದೆ. ಸುಪ್ರೀಂ ಕೋರ್ಟ್ಗೆ ಹೋದ ನಂತರ ಕೇಂದ್ರ ಸರ್ಕಾರ 3454.22 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ. ಈ ಪೈಕಿ 32.66.42 ಕೊಟಿ ರು.ಗಳನ್ನು ಬೆಳೆಹಾನಿ ಪರಿಹಾರ ಹಾಗೂ 232.42 ಕೋಟಿ ರು.ಗಳನ್ನು ಜೀವನೋಪಾಯ ಪರಿಹಾರಕ್ಕೆ ಬಿಡುಗಡೆ ಮಾಡಿದೆ ಎಂದು ಮಾಹಿತಿ ನೀಡಿದರು.
ವರ್ಷ ಮುಂಗಾರು ಹಂಗಾಮಿನಲ್ಲಿ ಬರದಿಂದಾಗಿ ಬೆಳೆ ಹಾನಿಯಾದ 38,78,525 ರೈತರಿಗೆ 3535.30 ಕೋಟಿ ರು.ಗಳನ್ನು ಹಾಗೂ ಹಿಂಗಾರು ಹಂಗಾಮಿನಲ್ಲಿ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಅತಿ ಮಳೆಯಿಂದ ಉಂಟಾದ ಬೆಳೆ ಹಾನಿಗೆ 4859 ರೈತರಿಗೆ 5.66 ಕೋಟಿ ರು.ಗಳನ್ನು ಪರಿಹಾರವನ್ನು ರೈತರ ಖಾತೆಗಳಿಗೆ ನೇರವಾಗಿ ಪಾವತಿಸಲಾಗುತ್ತಿದೆ.
ಬೆಳೆಹಾನಿಗೆ ಪರಿಹಾರ ಪಡೆದ ರೈತರಿಗೆ ಬೆಳೆ ವಿಮೆ ಅಡಿ ಪರಿಹಾರ ನೀಡಬಾರದೆಂಬ ನಿಯಮವನ್ನು ಕೇಂದ್ರ ಸರ್ಕಾರ ಅಳವಡಿಸಿಕೊಂಡಿತ್ತು. ಈ ಬಗ್ಗೆ ಕೇಂದ್ರ ಬಜೆಟ್ ಪೂರ್ವ ಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಗಮನಕ್ಕೆ ತರಲಾಯಿತು. ಈ ತಪ್ಪನ್ನು ಸರಿಪಡಿಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದರು.
ಇದರ ಜೊತೆಗೆ ರಾಜ್ಯ ಸರ್ಕಾರದಿಂದ 1296 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ ಎಂದರು. ವಿಶೇಷವಾಗಿ ನೀರಾವರಿ ಆಶ್ರಿತ ಪ್ರದೇಶಗಳಲ್ಲಿ ಕಾಲುವೆಯಿಂದ ನೀರು ಬಿಟ್ಟರೂ ನೀರು ತಲುಪದ ಕಾಲುವೆಯ ಕೊನೆಯಲ್ಲಿರುವ ರೈತರು ಹಾಗೂ ನೀರು ಬಿಡುಗಡೆ ಮಾಡಲು ಆಗದೇ ಬೆಳೆ ಹಾನಿಗೆ ಒಳಗಾದ ರೈತರಿಗೂ ಸಹ ಪರಿಹಾರ ನೀಡಲಾಗಿದೆ ಎಂದು ವಿವರಿಸಿದರು.